Saturday, May 23, 2009

ಮದ್ದು - ಮರೆಯುವ ಮುನ್ನ

ಇದನ್ನು ಕೇವಲ ಮಾಹಿತಿಗಾಗಿ ಮಾತ್ರ ಬರೆಯುತ್ತಿದ್ದೇನೆ. ಇದನ್ನು ಬೇರೆ ಯಾವುದೇ ಸಂಕುಚಿತ ದೃಷ್ಟಿಕೋನದಿಂದ ಓದದಿರಿ.

ಸುಮಾರು ೨೦ - ೩೦ ವರ್ಷಗಳ ಹಿಂದೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಒಂದು ವಿಚಿತ್ರ ಗುಮಾನಿ ಇತ್ತು.ಅದೇನೆಂದರೆ ಅಲ್ಲಿಯ ಬ್ರಾಹ್ಮಣರ ಮನೆಗಳಲ್ಲಿ ಬ್ರಾಹ್ಮಣೇತರರು ಊಟ ಮಾಡಿದರೆ ಅವರಿಗೆ ಊಟದಲ್ಲಿ ಮದ್ದು ಬೆರೆಸಿ ಕೊಡುತ್ತಾರೆ ಎಂದು. ಇಲ್ಲಿ ಮದ್ದು ಎಂದರೆ ಖಾಯಿಲೆ ಗುಣಪಡಿಸುವ ಔಷಧ ಅಲ್ಲ ಬದಲಾಗಿ ಆರೋಗ್ಯ ಕೆಡಿಸುವ ಪದಾರ್ಥ ಎಂಬರ್ಥದಲ್ಲಿ ಬಳಸಲಾಗುತ್ತದೆ.

ಈ ಗುಮಾನಿ ಹೇಗೆ ಪ್ರಾರಂಭವಾಯಿತೆಂದು ಖಚಿತವಾದ ಮಾಹಿತಿ ಇಲ್ಲದಿದ್ದರೂ, ತಮ್ಮ ಮನೆಯ ಆಳುಗಳು ಬೇರೆಯವರ ಮನೆಯ ಕೆಲಸಕ್ಕೆ ಹೋಗಬಾರದೆಂದು ಹೇಳಿದ ಒಂದು ಸುಳ್ಳು ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಅಂತ ಅನ್ನಿಸುತ್ತೆ. ಇದು ಎಷ್ಟು ತೀವ್ರವಾಗಿತ್ತೆಂದರೆ, ಎಂಥ ನಂಬಿಗಸ್ಥರಾದರೂ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಲು ಹಿಂಜರಿಯುತ್ತಿದ್ದರು. ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೂ ಮೊದಲು ಕೇಳುತ್ತಿದ್ದುದು "ಯಾರ ಮನೆಯಲ್ಲಿ ಊಟ ಮಾಡಿದ್ದೆ?" ಎಂದು. ಚಿಕ್ಕ ಜ್ವರ, ಮೈ ಕೈ ನೋವು ಗಳಿಗೂ ಬ್ರಾಹ್ಮಣರ ಮನೆಯ ಮದ್ದೇ ಕಾರಣ ಅಂತ ಜನ ನಂಬುತ್ತಿದ್ದರು ಮತ್ತು ಈ ಮದ್ದನ್ನು ಕಕ್ಕಿಸಿದರೆ ಮಾತ್ರ ವ್ಯಕ್ತಿ ಸರಿಹೋಗುತ್ತಾನೆ ಅಂತ ಜನರ ನಂಬಿಕೆ. ಈ ಕೆಲಸಕ್ಕಾಗಿಯೇ ಅನೇಕ ಮದ್ದು ಕಕ್ಕಿಸುವ ಬೈದಿಗಳು ಹುಟ್ಟಿಕೊಂಡಿದ್ದರು. ಬೈದಿ ರೋಗಿಯನ್ನು ಒಂದು ದಿನ ತಮ್ಮಲ್ಲುಳಿಸಿಕೊಂಡು ಏನೇನೋ ಕುಡಿಯಲು ಕೊಟ್ಟು ವಾಂತಿ ಮಾಡಿಸಿ, ವಾಂತಿಯಲ್ಲಿ ಏನೋ ಒಂದು ಗಟ್ಟಿ ವಸ್ತುವನ್ನು ತೋರಿಸಿ ಮದ್ದು ತೆಗೆದಿದ್ದೇನೆ ಅಂತ ಹೇಳಿ ಕಳುಹಿಸುತ್ತಿದ್ದರು.

ಒಮ್ಮೆ ನಮ್ಮ ಊರಿನಲ್ಲೊಬ್ಬ ಹಿರಿಯರು ಇಂತಹ ಆರೋಪ ಎದುರಿಸಬೇಕಾಗಿ ಬಂದಿತ್ತು. ಅವರು ಎಷ್ಟು ಪರಿಪರಿಯಾಗಿ ತಿಳಿ ಹೇಳಿದರೂ ಊರವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ, ಏಕೆಂದರೆ ಅವರಾಗಲೇ ಬೈದಿ ಕಕ್ಕಿಸಿದ ಮದ್ದನ್ನು ನೋಡಿದ್ದರು. ನಂತರ ಎಲ್ಲ ಸೇರಿ ಬೈದಿಯನ್ನು ಪರೀಕ್ಷೆ ಮಾಡುವುದು ಅಂದ ತೀರ್ಮಾನಿಸಿ, ಆರೋಗ್ಯವಾಗಿದ್ದ ವ್ಯಕ್ತಿಯಿಂದಲೂ ಆ ಬೈದಿ ಮದ್ದು ಕಕ್ಕಿಸಿದ್ದನ್ನು ನೋಡಿದಾಗಲೂ ಕೆಲವು ಜನ ಪೂರ್ತಿಯಾಗಿ ನಂಬುವ ಸ್ಥಿತಿಯಲ್ಲಿ ಇರಲಿಲ್ಲ.


ಸಮಾಧಾನದ ಸಂಗತಿಯೆಂದರೆ, ಕ್ರಮೇಣ ಕಡಿಮೆಯಾಗುತ್ತಾ ಬಂದ ಈ ಗುಮಾನಿ ಈಗ ಸಂಪೂರ್ಣವಾಗಿ ನಶಿಸಿ ಹೋಗಿದೆ ಎನ್ನಬಹುದು.

Friday, May 22, 2009

ಮರು ನಾಮಕರಣ

ನಾನು ಬ್ಲಾಗ್ ಲೋಕಕ್ಕೆ ಪಾದಾರ್ಪಣೆ ಮಾಡಿ ಸುಮಾರು ಎರಡುವರೆ ವರ್ಷವಾದರೂ, ಬರೆದಿದ್ದು ಮಾತ್ರ ಅತ್ಯಲ್ಪ. ನಂತರ ಕೆಲಸದ ಒತ್ತಡವೋ, ಆಲಸ್ಯವೋ, ನಿರ್ಲಕ್ಷ್ಯವೋ ಗೊತ್ತಿಲ್ಲ ಬರೆವಣಿಗೆ ನಿಲ್ಲಿಸಿ ಸುಮಾರು ಎರಡು ವರ್ಷ ಆಯ್ತು. ಶ್ರೀನಿಧಿ ಸಿಕ್ಕಿದಾಗಲೆಲ್ಲ ಬ್ಲಾಗ್ ಯಾವಾಗ ಬರೀತೆ? ಅಂತಾ ಕೇಳ್ತಾನೆ ಇದ್ದ. ಕಳೆದ ಬಾರಿ ಸಿಕ್ಕಾಗ ಮೇ ಮುಗಿಯುವುದರ ಒಳಗೆ ಬರೆಯುತ್ತೇನೆಂದು ವಾಗ್ದಾನ ಮಾಡಿದ್ದೆ. ಅದರಂತೆ ಈಗ ಮತ್ತೆ ಬರೆಯಲೇ ಬೇಕೆಂದು ಧೃಡ ನಿರ್ಧಾರ ಮಾಡಿದ್ದೇನೆ. ತುಂಬಾ ದಿನ ಬರೆಯುತ್ತಲೇ ಇರಬೇಕೆಂದು ಅಂದುಕೊಂಡಿದ್ದೇನೆ ಕೂಡ.

ಈ ಸಮಯದಲ್ಲಿ ಬಂದ ಇನ್ನೊಂದು ಆಲೋಚನೆ ಅಂದರೆ, ಈ ಬ್ಲಾಗ್ ನ ಮರು ನಾಮಕರಣ.
ಶುರುಮಾಡಿದಾಗ ಇದಕ್ಕೆ "ಕನ್ನಡದ ಕಂದ" ಅಂತ ಹೆಸರು ಇಟ್ಟಿದ್ದೆ, ಈಗ ಇದರ ಕೊಂಡಿಯನ್ನು ಹಾಗೇ ಉಳಿಸಿಕೊಂಡು ಬ್ಲಾಗ್ ನ ಹೆಸರು ಮಾತ್ರ "ಬೆಳಕಿಂಡಿ" ಎಂದು ಬದಲಾಯಿಸಿ ಪ್ರಾರಂಭಿಸುತ್ತಿದ್ದೇನೆ.
ನಿಮ್ಮೆಲ್ಲರ ಸಲಹೆ, ಸಹಕಾರ, ಕೋಪ, ಮಾರ್ಗದರ್ಶನ ಸದಾ ನನ್ನ ಮೇಲಿರಲಿ.

ಪ್ರೀತಿಯ
ಗುಹೆ

Tuesday, May 15, 2007

ಮಗುವಿನ ಮುಗ್ಧತೆಗೆ ಸಾಕ್ಷಿ.

ಮಗುವಿನ ಮುಗ್ಧತೆಗೆ ಇನ್ನೆಲ್ಲಿಯ ಸಾಕ್ಷಿ ಬೇಕು ಅಲ್ವಾ?

Friday, May 11, 2007

ಮಲ ಪರೀಕ್ಷೆ.

ನಮ್ಮ ಊರು ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಒಂದು ಹಳ್ಳಿ. ಒಂದು ಕಡೆ ಭೋರ್ಗೆರೆಯುವ ಅರಬ್ಬೀ ಸಮುದ್ರ ಇನ್ನೊಂದು ಕಡೆ ಎದೆಯೆತ್ತಿ ನಿಂತಿರುವ ಪಶ್ಚಿಮ ಘಟ್ಟಗಳ ಸಾಲು. ಆ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಮೊದಲಿನಿಂದಲೂ ವಾಸಿಸುತ್ತಿರುವ ಒಂದು ಬುಡಕಟ್ಟು ಜನಾಂಗವಿದೆ. ಅರಣ್ಯ ಉತ್ಪನ್ನಗಳಾದ ಶ್ರೀಗಂಧ, ಬೆತ್ತ, ಹೆಗ್ಲಿ(ಅಣಬೆ, mashroom), ಕಣಾಲೆ(ಎಳೆ ಬಿದುರು) ಮುಂತಾದವುಗಳನ್ನು ಮಾರಿ ತಮ್ಮ ಜೀವನ ಸಾಗಿಸುತ್ತಾರೆ. ಅವರು ಮಾತನಾಡುವ ಭಾಷೆ ಮರಾಠಿಯಾದರೂ ಮೂಲ ಮರಾಠಿಗಿಂತ ತುಂಬಾ ಭಿನ್ನ. ಇವರು ತುಂಬಾ ಹಿಂದುಳಿದ ಜನಾಂಗವಾದ್ದರಿಂದ ಸ್ವಲ್ಪ ಪೆದ್ದುಪೆದ್ದಾಗಿ ವರ್ತಿಸುತ್ತಾರೆ. ಆದ್ದರಿಂದ ಅವರು ನಮ್ಮ ಹಾಸ್ಯಕ್ಕೆ ವಸ್ತುವಾಗಿದ್ದಾರೆ. ಊರಲ್ಲಿ ಯಾರಾದರೂ ಪೆದ್ದಾಗಿ ವರ್ತಿಸಿದಿರೆ "ನೀನೆಲ್ಲಿ ಮರಾಠಿ ಮಾರಾಯಾ?" ಅಂತ ಟೀಕಿಸುವುದು ಮಾಮೂಲು. ಒಟ್ಟಾರೆ ನಮ್ಮ ಊರಲ್ಲಿ "ಮರಾಠಿ" ಎನ್ನುವುದು ಪೆದ್ದ, ದಡ್ಡ ಪದಗಳಿಗೆ ಅನ್ವರ್ಥಕ ಪದ. ಈ ಮರಾಠಿಗಳು ಸುಮಾರಾಗಿ ಪೇಟೆಗೆ ಬರುವುದೇ ಸಂತೆ ನಡೆಯುವ ದಿನವಾದ ಭಾನುವಾರ. ತಾವು ತಂದ ವಸ್ತು ಮಾರಿ, ಅವಶ್ಯಕ ವಸ್ತುಗಳನ್ನು ಖರೀದಿಸಿ ಮರಳುತ್ತಾರೆ.

ಒಮ್ಮೆ ಸಂತೆಗೆ ಬಂದಿದ್ದ ಒಬ್ಬ ಮರಾಠಿಗೆ ಏನೋ ಆರೋಗ್ಯ ಸರಿ ಇರಲಿಲ್ಲ ಅಂತ ಡಾಕ್ಟರ್ ಬಳಿ ಹೋದ. ಆ ಡಾಕ್ಟರ್ ಮೂಲತಃ ನಮ್ಮ ಊರಿನವರೇ, ಎಲ್ಲರಿಗೂ ಸುಪರಿಚಿತರು. ಅವರ ಮನೆಯನ್ನೇ ಕ್ಲಿನಿಕ್ ಆಗಿಸಿಕೊಂಡಿದ್ದರು. ಫಸ್ಟ್ ಫ್ಲೋರಿನಲ್ಲಿ ಮನೆ, ಕೆಳಗಡೆ ಕ್ಲಿನಿಕ್. ಅವರು ಆಗಾಗ ತಮ್ಮ ಹತ್ತಿರ ಬರುವ ಮರಾಠಿಗಳಿಗೆ ಹೆಗ್ಲಿ ಮುಂತಾದವುಗಳನ್ನು ತಂದು ಕೊಡಲು ಹೇಳುತ್ತಿದ್ದರು.
ಆವತ್ತು ಆ ಮರಾಠಿಯನ್ನು ತಪಾಸಣೆ ಮಾಡಿ, "ನಿನ್ನ ಮಲ ಪರೀಕ್ಷೆ ಮಾಡಬೇಕು, ಮುಂದಿನವಾರ ಬರುವಾಗ ಮಲ ತೆಗೆದುಕೊಂಡು ಬಾ" ಅಂತ ಹೇಳಿ ಕಳುಹಿಸಿದ್ದರು. ಆ ಮರಾಠಿ ವಾರದ ಎಲ್ಲಾ ದಿನದ ಮಲವನ್ನು ಕಾದಿರಿಸಿ, ಒಂದು ದೊಡ್ಡ ಅಡಿಕೆ ಹಾಳೆಯಲ್ಲಿ ಚೆನ್ನಾಗಿ ಪ್ಯಾಕ್ ಮಾಡಿ ಡಾಕ್ಟರ್ ಹತ್ತಿರ ಬಂದ. ಕ್ಲಿನಿಕ್ ನಲ್ಲಿ ಬೇರೆಲ್ಲಾ ರೋಗಿಗಳು ಇದ್ದರು. ಇವನಿಗೆ ಡಾಕ್ಟರರಲ್ಲಿ ಹೇಳಲು ನಾಚಿಕೆ. ಪ್ಯಾಕೆಟನ್ನು ಹೊರಗೇ ಇಟ್ಟು, ಡಾಕ್ಟರ್ ಬಳಿ ಹೋಗಿ "ಡಾಕ್ಟ್ರೇ ಮೊನ್ನೆ ನೀವು ಏನೋ ತರುಕೆ ಹೇಳಿರಲ? ಅದ್ನ ತಂದವ್ನೆ" ಅಂದ. ಡಾಕ್ಟರ್ ರಿಗೆ ಮಲಪರೀಕ್ಷೆಗೆ ಹೇಳಿದ್ದು ನೆನಪು ಹೋಗಿತ್ತು. ಇವನು ಹೆಗ್ಲಿನೇ ತಂದಿರಬೇಕು ಎಂದೆಣಿಸಿ, "ಮೇಲೆ ಅಮ್ಮಾವ್ರು ಇದಾರೆ ತಗೊಂಡು ಹೋಗಿ ಕೊಡು" ಅಂದರು. ಇವ ನಾಚಿಕೆಯಿಂದ "ಇಲ್ಲಾ, ನೀವೆ ಇಟ್ಕಣಿ" ಅಂದ. ಅದಕ್ಕವರು "ಹೇ, ಹೋಗಾ ನಾನು ಕೊಟ್ಟು ಕಳಿಸಿದೆ ಅಂತ ಹೇಳು" ಅಂತ ಗದರಿದರು. ಮರಾಠಿ ಮಹಡಿ ಮೇಲೆ ಹೋಗಿ ಅಮ್ಮಾವ್ರ ಕರೆದು "ಇದ್ನ ಡಾಕ್ಟ್ರು ನಿಮ್ಮತ್ರ ಕೊಡಿ ಅಂದವ್ರೆ" ಅಂತ ಹೇಳಿ ಕೊಟ್ಟು ಬಂದ. ಡಾಕ್ಟ್ರ ಹೆಂಡತಿಗೂ ಇದೇನು ಹೊಸದಲ್ಲ, ಆಗಾಗ ಅವರಿವರು ಹೆಗ್ಲಿನ ತಂದು ಕೊಡುತ್ತಿದ್ದರು. ಇದು ಹಾಗೆ ಎಣಿಸಿ ಅಡುಗೆ ಮನೆಯ ಒಲೆಯ ಹತ್ತಿರ ಇಟ್ಟು ಬೇರೆ ಕೆಲಸದಲ್ಲಿ ತೊಡಗಿದರು. ಸ್ವಲ್ಪ ಹೊತ್ತಿನ ನಂತರ ಇದೇನೋ ವಾಸನೆ ಹೊಡೆಯುತ್ತಿದೆ ಎಂದು ತೆಗೆದು ನೋಡಿದರೆ...................................... :)
ನಂತರ ಆ ಡಾಕ್ಟರ್ ದಂಪತಿಗಳು ಹೆಗ್ಲಿ ತಿನ್ನುವುದು ಬಿಟ್ರು ಅನ್ನೋದು ಸುದ್ದಿ.

Wednesday, May 09, 2007

ಉತ್ಸವ - ಉಸ್ತವ

ಆಗಷ್ಟೇ ಹೈಸ್ಕೂಲಿನ ಓದು ಮುಗಿಸಿ ಭಟ್ಕಳದ ಸುಧೀಂದ್ರ ಕಾಲೇಜ್ ಸೇರಿದ್ದೆ. ಹೈಸ್ಕೂಲಿನ ಖಾಕಿ ಚಡ್ಡಿ ಬಿಳಿ ಅಂಗಿ ಸಮವಸ್ತ್ರದಿಂದ ಮುಕ್ತಿ ಹೊಂದಿ ಬಣ್ಣ ಬಣ್ಣದ ಪ್ಯಾಂಟು ಶರ್ಟ್ ಧರಿಸಲು ಶುರು ಮಾಡಿದ್ದೆ. ಮನೆಯಿಂದ ಕಾಲೇಜಿಗೆ 15 ನಿಮಿಷ ಬಸ್ಸಿನಲ್ಲಿ ಪ್ರಯಾಣ. ಆಗಲೇ ನಮ್ಮ ಊರಲ್ಲಿ ಒಂದೆರಡು ಹೆಣ್ಣು ಬಸ್ಸುಗಳಿದ್ದವು. ಆ ಬಸ್ಸಿನ ಮುಂದಿನ ಬಾಗಿಲಲ್ಲಿ ಜೋತಾಡಿಕೊಂಡು, ಹತ್ತಿ ಇಳಿಯುವವರಿಗೆ ಅನುವು ಮಾಡಿಕೊಟ್ಟು ಹೋಗುವುದರಲ್ಲೇ ಏನೋ ಖುಷಿ.



ನಾನು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದೆ. ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ, ಕಾಲೇಜಿನ ಯಾವ ಪಾಠಗಳೂ ತಲೆಗೆ ಹತ್ತುತ್ತಿರಲಿಲ್ಲ, ಎಲ್ಲ ಕ್ಲಾಸಿನಲ್ಲಿ ಮೂಕನ ಹಾಗೆ ಕುಳಿತಿರುತ್ತಿದ್ದೆ. ನಮ್ಮ ಮ್ಯಾತ್ಸ್ ಲೆಕ್ಚರರ್ ಹನುಮೇಶ ವೈದ್ಯ ಅವರು ಆಗಾಗ ಹೇಳುತ್ತಿದ್ದ "Pardon" ಶಬ್ದದ ಉಚ್ಚಾರ ಮತ್ತು ಅರ್ಥ ತಿಳಿದುಕೊಳ್ಳಲು ತಿಂಗಳುಗಳೇ ಆಗಿದ್ದವು. ಈ ಪರಿಸ್ಥಿತಿಯಲ್ಲಿ ನನಗೆ ಮಾತಾಡಲು ಅವಕಾಶ ಇದ್ದ ಕ್ಲಾಸ್ ಅಂದರೆ ಕನ್ನಡ ಕ್ಲಾಸ್. ಆದರೆ ಆ ಕಾಲೇಜಿನವರಿಗೂ ಕನ್ನಡ ಅಂದ್ರೆ ಅಸಡ್ಡೆ ಇರಬೇಕು. ಯಾವುದೋ ಮೀಸಲಾತಿಯಿಂದ ಆಯ್ಕೆಯಾದ ಒಬ್ಬ ಮೇಡಮ್ ಅವರನ್ನು ನೇಮಿಸಿದ್ದರು. ಅವರ ಉಚ್ಚಾರವೇ ಸರಿಯಿರಲಿಲ್ಲ. ಒಂದೆರಡು ಕ್ಲಾಸ್ ಸುಮ್ಮನಿದ್ದೆ. ಒಂದು ದಿನ ಅವರು "ಉಸ್ತವ" ಎಂದು ಉಚ್ಚರಿಸಿದಾಗ, ಎದ್ದು ನಿಂತು "ಮೇಡಮ್ ಅದು ಉಸ್ತವ ಅಲ್ಲ, ಅದನ್ನು ಉತ್ಸವ ಎಂದು ಉಚ್ಚರಿಸಬೇಕು" ಎಂದು ಹೇಳಿದೆ. ಅವರು ಒಪ್ಪಲೇ ಇಲ್ಲ. ನಂತರ ನಾನೇ ಬೋರ್ಡ್ ಮೇಲೆ "ಉಸ್ತವ" ಎಂದು ಬರೆದು "ಇದನ್ನು ಹೇಗೆ ಉಚ್ಚರಿಸುತ್ತೀರಾ?" ಅಂತ ಕೇಳಿದೆ. "ಉಸ್ತವ" ಅಂದರು. "ಹಾಗಾದರೆ ಇವೆರಡಕ್ಕೆ ವ್ಯತ್ಯಾಸ ಇಲ್ಲವಾ?" ಅಂತ ಕೇಳಿದೆ. ಅದಕ್ಕವರು ಉದಾಹರಣೆ ಸಮೇತ ಉತ್ತರ ನೀಡಲು ಆರಂಭಿಸಿದರು, ಬೋರ್ಡ್ ಮೇಲೆ "to" ಮತ್ತು "two" ಎಂದು ಬರೆದು ನನಗೆ ಉಚ್ಚರಿಸಲು ಹೇಳಿದರು. ನನಗೆ ನಿಜಕ್ಕೂ ಶಾಕ್ ಹೊಡೆದ ಹಾಗೆ ಆಯ್ತು, ಏನು ಹೇಳಬೇಕೆಂದು ತಿಳಿಯದೆ, ನನ್ನ ಜಾಗದಲ್ಲಿ ಹೋಗಿ ಕುಳಿತೆ. ಅವರು ನನ್ನ ಕಡೆ ವಿಜಯದ ನಗೆ ಬೀರುತ್ತಾ, ಎಲ್ಲರಿಗೂ ವಿವರಿಸಿ ಹೇಳತೊಡಗಿದರು. "ಇಂಗ್ಲಿಷಲ್ಲಿ ಸ್ಪೆಲ್ಲಿಂಗ್ ಮತ್ತು ಉಚ್ಚಾರ ಹೇಗೆ ಬೇರೆ ಬೇರೆ ಇರುತ್ತದೋ, ಹಾಗೆ ಕನ್ನಡದಲ್ಲಿ ಈ ಶಬ್ದ ಕೂಡ ಅದೇ ರೀತಿ.................".

ನಂತರ ಪರೀಕ್ಷೆಯಲ್ಲಿ "ಉತ್ಸವ(ಉಸ್ತವ ಎಂದು ಓದಬೇಕು)" ಅಂತ ಬರೆದು ಪ್ರತಿಭಟಿಸಿದ್ದೆ. ಅದನ್ನು ಓದಿ ಆ ಮೇಡಮ್ ಸಿಟ್ಟುಗೊಂಡು, ಕಾರಣ ಹೇಳದೇ ನನ್ನನ್ನು ಒಂದು ವಾರ ಕ್ಲಾಸಿನಿಂದ ಹೊರಗೆ ಹಾಕಿದ್ದರು.

Monday, April 09, 2007

ನಮ್ಮೂರ ಕೆರೆ ಬತ್ತುತ್ತಿದೆ......

ದಿನಗಳೆದಂತೆ ನಮ್ಮೂರ ಕೆರೆ ಬತ್ತುತಿದೆ,
ಅದ ನೋಡಿ ಎನ್ನ ಕಣ್ಣಾವಲಿಗಳು ತುಂಬುತಿದೆ

ಕೆರೆಗೆ ಬಂದು ಸೇರುತಿದ್ದ ತೊರೆಯು,
ಕೆರೆಯ ಸ್ನೇಹ ತೊರೆದಿದಂತಿದೆ

ತೂಗಿ ನಗುವ ಬೀರುತಿದ್ದ ತಾವರೆಯು
ತನ್ನ ತವರ ಮರೆತಿದಂತಿದೆ.

ಊರ ದಾಹವ ತೀರುತಿದ್ದ ಕೆರೆಯು
ತನ್ನ ದಾಹವಿಂಗಿಸಲು ಆಗಸವ ನೋಡುವಂತಿದೆ.

ತುಂಬಿ ಹರಿಯುತ್ತಿದ್ದ ನೀರು ತಳದ ಕೆಸರಾಗಿದೆ,
ಆ ನೇಸರನ ಉರಿ ತಾಪವ ತಾಳಲಾಗದೆ

ತೊರೆಗೆ ಏಳುತ್ತಿದ್ದ ಬಿಳಿಯ ನೊರೆಯಿಲ್ಲ,
ತಟದಲ್ಲಿ ನೆರೆಯುತ್ತಿದ್ದ ಬೆಳ್ಳಕ್ಕಿಯ ಬಳಗವಿಲ್ಲ

ಅಲ್ಲೀಗ ನೀರಿನ ಚಿಕ್ಕ ಸುಳಿಯಿಲ್ಲ,
ಆಡುತ್ತಿದ್ದ ಚಿಕ್ಕ ಮಕ್ಕಳ ಸುಳಿವಿಲ್ಲ

ತಂಪು ಗಾಳಿಗೆ ಏಳುತಿದ್ದ ತೆರೆಯಿಲ್ಲ,
ಕೆರೆಯ ಈ ಸ್ಥಿತಿ ಮನುಕುಲಕೆ ತರವಲ್ಲ

ಸುಮ್ಮನೆ ಕುಳಿತಿರುವೆಯಾ ಇದ ನೋಡಿ?
ಏಳಲಿ ನಿನ್ನಲಿ ಪರಿಸರ ಜಾಗೃತಿಯ ಕಿಡಿ
ನೀನಲ್ಲವೇ, ಈ ಕೆರೆಯ ನೀರನು ಕುಡಿದು ಬೆಳೆದ ನಮ್ಮೂರ ಕರುಳ ಕುಡಿ?

ಸೇದಿದ ಮೊದಲ ಬೀಡಿ.

ಯಾವುದಾದರೂ ವಿಷಯ ಅಥವಾ ವಸ್ತುವಿನಲ್ಲಿ ನನಗೆ ಆಸಕ್ತಿ ಉಂಟಾದರೆ ಅದನ್ನ ಪೂರ್ತಿ ತಿಳಿದು ಕೊಳ್ಳುವರೆಗೆ ನನ್ನಲ್ಲಿ ಏನೋ ಚಡಪಡಿಕೆ. ನಾನು ಎರಡನೇ ಕ್ಲಾಸಿನಲ್ಲಿರುವಾಗ ನನ್ನಲ್ಲಿ ಆಸಕ್ತಿ ಹುಟ್ಟಿಸಿದ್ದು ಎರಡಾಣೆಯ ಬೀಡಿ. ಇದಕ್ಕೆ ನಮ್ಮೂರಿನ ಭುಜಂಗ ಮಾಸ್ತರರು ಬೀಡಿ ಎಳೆಯುತ್ತಿದ್ದ ಶೈಲಿಯೇ ಕಾರಣವಾಗಿರಬೇಕು. ನನಗೆ ಬೀಡಿಯ ಬಗ್ಗೆ ಜ್ಞಾನ ಎಷ್ಟಿತ್ತೆಂದರೆ ಬೀಡಿ ಸೇದುವಾಗ ಉಸಿರನ್ನು ಒಳಗೆ ಎಳೆಯಬೇಕೋ ಅಥವಾ ಹೊರಗೆ ಬಿಡಬೇಕೋ ಅಂತ ಕೂಡ ತಿಳಿದಿರಲಿಲ್ಲ. ಹಾಗಂತ ಅದರ ಬಗ್ಗೆ ತಿಳಿದುಕೊಳ್ಳದೇ ಪ್ರಯೋಗ ಮಾಡುವ ಧೈರ್ಯವೂ ಇರಲಿಲ್ಲ.

ಒಮ್ಮೆ ನಮ್ಮ ಮನೆಯ ಯಾವುದೋ ಸಮಾರಂಭಕ್ಕೆ ಬಂದಿದ್ದ ಭುಜಂಗ ಮಾಸ್ತರರು, ಊಟದ ನಂತರ ಬವಂತಿಯ ಜಗುಲಿ ಮೇಲಿನ ತಳಿಯ ಬಾಗಿಲಿಗೆ ಒರಗಿ ಕುಳಿತು ಬೀಡಿ ಹಚ್ಚಿದರು. ಸಣಕಲು ದೇಹ ವಯಸ್ಸು ಸುಮಾರು 60 ಇರಬೇಕು. ಮನಸ್ಸು ಮಾತ್ರ ಮಗುವಿನಂತದ್ದು, ಕೀರು ದನಿ, ಒಬ್ಬರಿಗೂ ಗಟ್ಟಿ ಮತಾಡಿ ಗೊತ್ತಿಲ್ಲ. ಅವರು ಮಾಸ್ತರರಾಗಿ ನಿವೃತ್ತಿಯಾಗುವವರೆಗೂ ಒಬ್ಬೇ ಒಬ್ಬ ಶಿಷ್ಯನಿಗೂ ಹೊಡೆದಿರಲಿಲ್ಲವಂತೆ. ಅವರು ಹಾಗೆ ಒಂದೊಂದು ದಮ್ಮು ಎಳೆದು ಬಿಡುತ್ತಿದ್ದ ಹೊಗೆ ತಳಿಯ ಕಂಬಗಳನ್ನು ಬಳಸಿ ಹೊರನಡೆಯುತ್ತಿತ್ತು. ಹಾಗೆ ಒಂದು ನಿಮಿಷ ಮುಂಡಗಿ ಕಂಬಕ್ಕೆ ಒರಗಿ ನೋಡುತ್ತಾ ಇದ್ದೆ. ಒಮ್ಮೆ ಗಟ್ಟಿ ಮನಸ್ಸು ಮಾಡಿ ಅವರ ಹತ್ತಿರ ಹೋಗಿ "ಬೀಡಿ ಎಳೆಯುವಾಗ ಉಸಿರನ್ನು ಒಳಗೆ ಎಳೆಯಬೇಕೋ ಹೊರಗೆ ಬಿಡಬೇಕೋ" ಅಂತ ಕೇಳಿಯೇ ಬಿಟ್ಟೆ. ಪಾಪದ ಮಾಸ್ತರರಾದ್ದರಿಂದ ನಂಗೆ ಒಂದು ಮಾತನ್ನೂ ಬೈಯ್ಯದೇ ಪ್ರಾತ್ಯಕ್ಷಿಕೆ ಸಮೇತ ಬೀಡಿ ಸೇದುವ ವಿಧಾನ ವಿವರಿಸಿದರು. ಆದರೇ ನನಗೆ ಅದನ್ನು ಪ್ರಯೋಗ ಮಾಡದ ಹೊರತು ಸಮಾಧಾನ ಇರಲಿಲ್ಲ.

ಅಂಗಳ ಹೆಬ್ಬಾಗಿಲು ದಾಟಿ ನಮ್ಮ ಮನೆ ಹೊಕ್ಕಿದೊಡನೆ ಸಿಗುವುದೇ ಆಯತಾಕಾರದ ದೊಡ್ಡ ಬವಂತಿ. ಅದರ ಮೂರು ಪಾರ್ಶ್ವದಲ್ಲಿ ಒಂದಡಿ ಎತ್ತರದ ಜಗುಲಿ. ಜಗುಲಿಗೆ ಬಳಸಿದಂತೆ ಬೃಹದಾಕಾರದ ಎಂಟು ಮುಂಡಗಿ ಕಂಬಗಳು. ಮಧ್ಯದಲ್ಲಿ ಪ್ರಧಾನ ಬಾಗಿಲು. ಪ್ರಧಾನ ಬಾಗಿಲ ಮೇಲೆ ಒಂದೆರಡು ದೇವರ ಫೋಟೊ. ಬಲಗಡೆ ಅಜ್ಜಯ್ಯನ ಹಳೆಯ ಎರಡು ಆರಾಮ ಕುರ್ಚಿಗಳು ಮತ್ತು ಹೊಸದಾಗಿ ಮಾಡಿಸಿದ ಒಂದು ಸ್ಟೂಲು.

ಮಧ್ಯಾಹ್ನದಿಂದ ಒಂದು ಬೀಡಿ ನನ್ನ ಚಡ್ಡಿ ಕಿಸೆಯಲ್ಲೇ ಇತ್ತು, ಆಗಾಗ ಅದನ್ನ ಮುಟ್ಟಿ ನೋಡಿಕೊಳ್ತಾ ಸರಿಯಾದ ಸಮಯಕ್ಕಾಗಿ ಕಾಯ್ತಾ ಇದ್ದೆ . ಸಂಜೆ ಆಗುವಷ್ಟರಲ್ಲಿ ಬಂದ ನೆಂಟರೆಲ್ಲಾ ಜಾಗ ಖಾಲಿ ಮಾಡಿದ್ದರು. ಆಗಿನ್ನೂ ನಮ್ಮ ಮನೆಗೆ ಕರೆಂಟು ಬಂದಿರಲಿಲ್ಲ. ಬವಂತಿಯ ಮಧ್ಯದಲ್ಲಿ ನೇತುಹಾಕಿದ್ದ ಲಾಟೀನಿನ ಮಬ್ಬು ಬೆಳಕು, ಬವಂತಿಯನ್ನು ಅಸ್ಪಷ್ಟವಾಗಿ ತೋರಿಸುತ್ತಿತ್ತು. ಮನೆಯವರೆಲ್ಲಾ ಒಳಗೆ ಹಿತ್ತಲಕಡೆಯಲ್ಲಿ ಇದ್ದರು. ಬವಂತಿ ನಿರ್ಜನವಾಗಿತ್ತು. ನಾನು ಎರಡು ಆರಾಮ ಕುರ್ಚಿಗಳ ನಡುವೆ ಜಾಗ ಮಾಡಿಕೊಂಡು ಚಡ್ಡಿಯಲ್ಲಿದ್ದ ಬೀಡಿ ತೆಗೆದು ಹೊತ್ತಿಸಿದೆ, ಭುಜಂಗ ಮಾಸ್ತರರ ನೆನೆಯುತ್ತಾ ಒಂದು ದಮ್ಮು ಎಳೆಯುವಷ್ಟರಲ್ಲಿ ಪ್ರಧಾನ ಬಾಗಿಲಿಂದ ಯಶೋದತ್ತೆ ಹೊರಗೆ ಬಂದಳು. ಆ ಮಬ್ಬು ಬೆಳಕಿನಲ್ಲಿ ಬೀಡಿಯ ಬೆಂಕಿ ಸ್ಪಷ್ಟವಾಗಿ ಕಾಣುತ್ತಿತ್ತು. "ಯಾರದು?" ಎಂದಳು. ನಾನು ಬೀಡಿಯನ್ನು ನೆಲಕ್ಕೆ ಎಸೆದೆ. ಹತ್ತಿರ ಬಂದು "ಗುರು ಬೀಡಿ ಸೇದುತ್ತಾ ಇದ್ಯಾ?" ಅಂತ ಕೇಳಿದಳು. ನಾನು ಉತ್ತರಿಸಬೇಕಾದ ಅಗತ್ಯ ಇರಲಿಲ್ಲ. ನಾನು ಬೀಡಿಗೆ ಬೆಂಕಿ ಹಚ್ಚಿದ್ದು, ಮನೆಮಂದಿಗೆಲ್ಲಾ ಕಾಡ್ಗಿಚ್ಚಿನಂತೆ ಹಬ್ಬಿ ನಂತರ ಅದೇ ಮಾಮೂಲು ನುಕ್ಕಿ ಬಡ್ರು, ಪರಂಗಿಮಣೆ. ಇದು ಬೀಡಿಗಿಂತ ಏನೂ ವಿಶೇಷ ಅಲ್ಲ ಬಿಡಿ.

Friday, April 06, 2007

ನಾನೊಂದು ನಾನ್ ತಿಂದೆ.

ನಿನ್ನೆ ಬಸವನಗುಡಿಯ ಕಾಮತ್ ಬ್ಯೂಗಲ್ ರಾಕ್ ನಲ್ಲಿ ನಮ್ಮ ಬಾಸ್ ಅವರ ಬರ್ತಡೆ ಪಾರ್ಟಿ ಇತ್ತು. ನಾನು, ಕಾಶಿ, ಜೆಸಿ, ಜ್ಯೋತಿ, ಪದಿ, ಆದು, ಜಗ್ಗಣ್ಣ ಹೀಗೆ ಸುಮಾರು ಹತ್ತು ಜನ ಸೇರಿದ್ದೆವು. ಫಸ್ಟ್ ಫ್ಲೋರಿನ ಒಂದು ರೌಂಡ್ ಟೇಬಲ್ಲಿನಲ್ಲಿ ಕುಳಿತು ಸುತ್ತಲೂ ಸೇರಿದ್ದ ಬಿ.ಎಂ.ಎಸ್. ಕಾಲೇಜಿನ ಹಕ್ಕಿಗಳ ಸೌಂದರ್ಯ ವಿಮರ್ಶೆ ಮಾಡುತ್ತಾ ಕುಳಿತಿದ್ದೆವು.

ಸಪ್ಲೈಯರ್ ಬಂದು "ಏನು ಬೇಕು ಸರ್?" ಅಂದ. "ಏನಿದೆ?" ಅಂತ ಕೇಳಿದ್ದಕ್ಕೆ "ನಾನ್ ಇದೆ" ಅಂದ. ಪಕ್ಕದಲ್ಲಿದ್ದ ಜಗ್ಗಣ್ಣ "ನನಗೊಂದು ನಾನ್" ಅಂದ. ನನಗೆ ಅವರಿಬ್ಬರ ಸಂಭಾಷಣೆ ಅರ್ಥ ಆಗಲಿಲ್ಲ. ಸ್ವಲ್ಪ ಸಮಯದ ನಂತರ ತಿಳಿಯಿತು ಅದೊಂದು ರೊಟ್ಟಿ ತರಹದ ತಿಂಡಿ ಎಂದು. ದರ್ಶಿನಿ, ಸಾಗರಗಳಲ್ಲಿ ಇಡ್ಲಿ ಸಾಂಬಾರ್ ತಿನ್ನುವವನಿಗೆ ಇದೆಲ್ಲಿಂದ ಗೊತ್ತಿರಬೇಕು?

ಅದಕ್ಕೆ ಆ ಹೆಸರು ಇಟ್ಟ ಪುಣ್ಯಾತ್ಮನ ವಿಚಾರ ಏನಿತ್ತೋ ಏನೋ? "ನಾನು" ಎನ್ನುವುದು ಅಹಂಕಾರದ ಪ್ರತೀಕ, ಅದನ್ನ ತಿಂದು ಅಹಂಕಾರವನ್ನು ಕಡಿಮೆ ಮಾಡಿಕೊಳ್ಳುವುದೆಂದೋ ಅಥವಾ ತಿಂದು ಹೆಚ್ಚುಮಾಡಿಕೊಳ್ಳುವುದೆಂದೋ? ತಿಳಿದವರು ಹೇಳಿದರೆ ಒಳಿತು.

ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಹೋದಾಗ ಅಮ್ಮ "ಊಟ ಆಯಿತಾ ಮಗಾ?" ಅಂತ ಕೇಳಿದಳು. "ಊಟ ಮಾಡಿಲ್ಲೆ, ನಾನೊಂದು ನಾನು ತಿಂದೆ" ಅಂದೆ. ಅಮ್ಮನಿಗೆ ಅರ್ಥವಾಗದೆ "ಏನಾದರೂ ತಿನ್ನು ಈಗ ನನ್ನ ತಲೆ ತಿನ್ನಬೇಡ ಬಿದ್ಕ ಸುಮ್ನೆ" ಅಂದಳು.