Monday, June 28, 2010
ಮಲೆನಾಡಿನ ಮಳೆಗಾಲದಲ್ಲೊಂದು ದಿನ
ಸತ್ಯ ಏನೆಂದರೆ ಕಳೆದುಕೊಳ್ಳುವವರೆಗೂ ಇವು ಅಪೂರ್ವವಾದುದೆಂದು ಅನ್ನಿಸಿರಲೇ ಇಲ್ಲ.
ನಾನು ಅನುಭವಿಸಿದ್ದನ್ನು ಹಂಚಿಕೊಳ್ಳುವ ಅನ್ನಿಸಿತು... ಕೆಲವು ಕ್ಷಣಗಳು ನಿಮಗಾಗಿ.
Thursday, June 17, 2010
ತಡೆಯಲಾಗದೆ.....
Saturday, May 23, 2009
ಮದ್ದು - ಮರೆಯುವ ಮುನ್ನ
ಸುಮಾರು ೨೦ - ೩೦ ವರ್ಷಗಳ ಹಿಂದೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಒಂದು ವಿಚಿತ್ರ ಗುಮಾನಿ ಇತ್ತು.ಅದೇನೆಂದರೆ ಅಲ್ಲಿಯ ಬ್ರಾಹ್ಮಣರ ಮನೆಗಳಲ್ಲಿ ಬ್ರಾಹ್ಮಣೇತರರು ಊಟ ಮಾಡಿದರೆ ಅವರಿಗೆ ಊಟದಲ್ಲಿ ಮದ್ದು ಬೆರೆಸಿ ಕೊಡುತ್ತಾರೆ ಎಂದು. ಇಲ್ಲಿ ಮದ್ದು ಎಂದರೆ ಖಾಯಿಲೆ ಗುಣಪಡಿಸುವ ಔಷಧ ಅಲ್ಲ ಬದಲಾಗಿ ಆರೋಗ್ಯ ಕೆಡಿಸುವ ಪದಾರ್ಥ ಎಂಬರ್ಥದಲ್ಲಿ ಬಳಸಲಾಗುತ್ತದೆ.
ಈ ಗುಮಾನಿ ಹೇಗೆ ಪ್ರಾರಂಭವಾಯಿತೆಂದು ಖಚಿತವಾದ ಮಾಹಿತಿ ಇಲ್ಲದಿದ್ದರೂ, ತಮ್ಮ ಮನೆಯ ಆಳುಗಳು ಬೇರೆಯವರ ಮನೆಯ ಕೆಲಸಕ್ಕೆ ಹೋಗಬಾರದೆಂದು ಹೇಳಿದ ಒಂದು ಸುಳ್ಳು ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಅಂತ ಅನ್ನಿಸುತ್ತೆ. ಇದು ಎಷ್ಟು ತೀವ್ರವಾಗಿತ್ತೆಂದರೆ, ಎಂಥ ನಂಬಿಗಸ್ಥರಾದರೂ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಲು ಹಿಂಜರಿಯುತ್ತಿದ್ದರು. ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೂ ಮೊದಲು ಕೇಳುತ್ತಿದ್ದುದು "ಯಾರ ಮನೆಯಲ್ಲಿ ಊಟ ಮಾಡಿದ್ದೆ?" ಎಂದು. ಚಿಕ್ಕ ಜ್ವರ, ಮೈ ಕೈ ನೋವು ಗಳಿಗೂ ಬ್ರಾಹ್ಮಣರ ಮನೆಯ ಮದ್ದೇ ಕಾರಣ ಅಂತ ಜನ ನಂಬುತ್ತಿದ್ದರು ಮತ್ತು ಈ ಮದ್ದನ್ನು ಕಕ್ಕಿಸಿದರೆ ಮಾತ್ರ ವ್ಯಕ್ತಿ ಸರಿಹೋಗುತ್ತಾನೆ ಅಂತ ಜನರ ನಂಬಿಕೆ. ಈ ಕೆಲಸಕ್ಕಾಗಿಯೇ ಅನೇಕ ಮದ್ದು ಕಕ್ಕಿಸುವ ಬೈದಿಗಳು ಹುಟ್ಟಿಕೊಂಡಿದ್ದರು. ಬೈದಿ ರೋಗಿಯನ್ನು ಒಂದು ದಿನ ತಮ್ಮಲ್ಲುಳಿಸಿಕೊಂಡು ಏನೇನೋ ಕುಡಿಯಲು ಕೊಟ್ಟು ವಾಂತಿ ಮಾಡಿಸಿ, ವಾಂತಿಯಲ್ಲಿ ಏನೋ ಒಂದು ಗಟ್ಟಿ ವಸ್ತುವನ್ನು ತೋರಿಸಿ ಮದ್ದು ತೆಗೆದಿದ್ದೇನೆ ಅಂತ ಹೇಳಿ ಕಳುಹಿಸುತ್ತಿದ್ದರು.
ಒಮ್ಮೆ ನಮ್ಮ ಊರಿನಲ್ಲೊಬ್ಬ ಹಿರಿಯರು ಇಂತಹ ಆರೋಪ ಎದುರಿಸಬೇಕಾಗಿ ಬಂದಿತ್ತು. ಅವರು ಎಷ್ಟು ಪರಿಪರಿಯಾಗಿ ತಿಳಿ ಹೇಳಿದರೂ ಊರವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ, ಏಕೆಂದರೆ ಅವರಾಗಲೇ ಬೈದಿ ಕಕ್ಕಿಸಿದ ಮದ್ದನ್ನು ನೋಡಿದ್ದರು. ನಂತರ ಎಲ್ಲ ಸೇರಿ ಬೈದಿಯನ್ನು ಪರೀಕ್ಷೆ ಮಾಡುವುದು ಅಂದ ತೀರ್ಮಾನಿಸಿ, ಆರೋಗ್ಯವಾಗಿದ್ದ ವ್ಯಕ್ತಿಯಿಂದಲೂ ಆ ಬೈದಿ ಮದ್ದು ಕಕ್ಕಿಸಿದ್ದನ್ನು ನೋಡಿದಾಗಲೂ ಕೆಲವು ಜನ ಪೂರ್ತಿಯಾಗಿ ನಂಬುವ ಸ್ಥಿತಿಯಲ್ಲಿ ಇರಲಿಲ್ಲ.
ಸಮಾಧಾನದ ಸಂಗತಿಯೆಂದರೆ, ಕ್ರಮೇಣ ಕಡಿಮೆಯಾಗುತ್ತಾ ಬಂದ ಈ ಗುಮಾನಿ ಈಗ ಸಂಪೂರ್ಣವಾಗಿ ನಶಿಸಿ ಹೋಗಿದೆ ಎನ್ನಬಹುದು.
Friday, May 22, 2009
ಮರು ನಾಮಕರಣ
ಈ ಸಮಯದಲ್ಲಿ ಬಂದ ಇನ್ನೊಂದು ಆಲೋಚನೆ ಅಂದರೆ, ಈ ಬ್ಲಾಗ್ ನ ಮರು ನಾಮಕರಣ.
ಶುರುಮಾಡಿದಾಗ ಇದಕ್ಕೆ "ಕನ್ನಡದ ಕಂದ" ಅಂತ ಹೆಸರು ಇಟ್ಟಿದ್ದೆ, ಈಗ ಇದರ ಕೊಂಡಿಯನ್ನು ಹಾಗೇ ಉಳಿಸಿಕೊಂಡು ಬ್ಲಾಗ್ ನ ಹೆಸರು ಮಾತ್ರ "ಬೆಳಕಿಂಡಿ" ಎಂದು ಬದಲಾಯಿಸಿ ಪ್ರಾರಂಭಿಸುತ್ತಿದ್ದೇನೆ.
ನಿಮ್ಮೆಲ್ಲರ ಸಲಹೆ, ಸಹಕಾರ, ಕೋಪ, ಮಾರ್ಗದರ್ಶನ ಸದಾ ನನ್ನ ಮೇಲಿರಲಿ.
ಪ್ರೀತಿಯ
ಗುಹೆ
Tuesday, May 15, 2007
Friday, May 11, 2007
ಮಲ ಪರೀಕ್ಷೆ.
ಒಮ್ಮೆ ಸಂತೆಗೆ ಬಂದಿದ್ದ ಒಬ್ಬ ಮರಾಠಿಗೆ ಏನೋ ಆರೋಗ್ಯ ಸರಿ ಇರಲಿಲ್ಲ ಅಂತ ಡಾಕ್ಟರ್ ಬಳಿ ಹೋದ. ಆ ಡಾಕ್ಟರ್ ಮೂಲತಃ ನಮ್ಮ ಊರಿನವರೇ, ಎಲ್ಲರಿಗೂ ಸುಪರಿಚಿತರು. ಅವರ ಮನೆಯನ್ನೇ ಕ್ಲಿನಿಕ್ ಆಗಿಸಿಕೊಂಡಿದ್ದರು. ಫಸ್ಟ್ ಫ್ಲೋರಿನಲ್ಲಿ ಮನೆ, ಕೆಳಗಡೆ ಕ್ಲಿನಿಕ್. ಅವರು ಆಗಾಗ ತಮ್ಮ ಹತ್ತಿರ ಬರುವ ಮರಾಠಿಗಳಿಗೆ ಹೆಗ್ಲಿ ಮುಂತಾದವುಗಳನ್ನು ತಂದು ಕೊಡಲು ಹೇಳುತ್ತಿದ್ದರು.
ಆವತ್ತು ಆ ಮರಾಠಿಯನ್ನು ತಪಾಸಣೆ ಮಾಡಿ, "ನಿನ್ನ ಮಲ ಪರೀಕ್ಷೆ ಮಾಡಬೇಕು, ಮುಂದಿನವಾರ ಬರುವಾಗ ಮಲ ತೆಗೆದುಕೊಂಡು ಬಾ" ಅಂತ ಹೇಳಿ ಕಳುಹಿಸಿದ್ದರು. ಆ ಮರಾಠಿ ವಾರದ ಎಲ್ಲಾ ದಿನದ ಮಲವನ್ನು ಕಾದಿರಿಸಿ, ಒಂದು ದೊಡ್ಡ ಅಡಿಕೆ ಹಾಳೆಯಲ್ಲಿ ಚೆನ್ನಾಗಿ ಪ್ಯಾಕ್ ಮಾಡಿ ಡಾಕ್ಟರ್ ಹತ್ತಿರ ಬಂದ. ಕ್ಲಿನಿಕ್ ನಲ್ಲಿ ಬೇರೆಲ್ಲಾ ರೋಗಿಗಳು ಇದ್ದರು. ಇವನಿಗೆ ಡಾಕ್ಟರರಲ್ಲಿ ಹೇಳಲು ನಾಚಿಕೆ. ಪ್ಯಾಕೆಟನ್ನು ಹೊರಗೇ ಇಟ್ಟು, ಡಾಕ್ಟರ್ ಬಳಿ ಹೋಗಿ "ಡಾಕ್ಟ್ರೇ ಮೊನ್ನೆ ನೀವು ಏನೋ ತರುಕೆ ಹೇಳಿರಲ? ಅದ್ನ ತಂದವ್ನೆ" ಅಂದ. ಡಾಕ್ಟರ್ ರಿಗೆ ಮಲಪರೀಕ್ಷೆಗೆ ಹೇಳಿದ್ದು ನೆನಪು ಹೋಗಿತ್ತು. ಇವನು ಹೆಗ್ಲಿನೇ ತಂದಿರಬೇಕು ಎಂದೆಣಿಸಿ, "ಮೇಲೆ ಅಮ್ಮಾವ್ರು ಇದಾರೆ ತಗೊಂಡು ಹೋಗಿ ಕೊಡು" ಅಂದರು. ಇವ ನಾಚಿಕೆಯಿಂದ "ಇಲ್ಲಾ, ನೀವೆ ಇಟ್ಕಣಿ" ಅಂದ. ಅದಕ್ಕವರು "ಹೇ, ಹೋಗಾ ನಾನು ಕೊಟ್ಟು ಕಳಿಸಿದೆ ಅಂತ ಹೇಳು" ಅಂತ ಗದರಿದರು. ಮರಾಠಿ ಮಹಡಿ ಮೇಲೆ ಹೋಗಿ ಅಮ್ಮಾವ್ರ ಕರೆದು "ಇದ್ನ ಡಾಕ್ಟ್ರು ನಿಮ್ಮತ್ರ ಕೊಡಿ ಅಂದವ್ರೆ" ಅಂತ ಹೇಳಿ ಕೊಟ್ಟು ಬಂದ. ಡಾಕ್ಟ್ರ ಹೆಂಡತಿಗೂ ಇದೇನು ಹೊಸದಲ್ಲ, ಆಗಾಗ ಅವರಿವರು ಹೆಗ್ಲಿನ ತಂದು ಕೊಡುತ್ತಿದ್ದರು. ಇದು ಹಾಗೆ ಎಣಿಸಿ ಅಡುಗೆ ಮನೆಯ ಒಲೆಯ ಹತ್ತಿರ ಇಟ್ಟು ಬೇರೆ ಕೆಲಸದಲ್ಲಿ ತೊಡಗಿದರು. ಸ್ವಲ್ಪ ಹೊತ್ತಿನ ನಂತರ ಇದೇನೋ ವಾಸನೆ ಹೊಡೆಯುತ್ತಿದೆ ಎಂದು ತೆಗೆದು ನೋಡಿದರೆ...................................... :)
ನಂತರ ಆ ಡಾಕ್ಟರ್ ದಂಪತಿಗಳು ಹೆಗ್ಲಿ ತಿನ್ನುವುದು ಬಿಟ್ರು ಅನ್ನೋದು ಸುದ್ದಿ.
Wednesday, May 09, 2007
ಉತ್ಸವ - ಉಸ್ತವ
ನಾನು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದೆ. ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ, ಕಾಲೇಜಿನ ಯಾವ ಪಾಠಗಳೂ ತಲೆಗೆ ಹತ್ತುತ್ತಿರಲಿಲ್ಲ, ಎಲ್ಲ ಕ್ಲಾಸಿನಲ್ಲಿ ಮೂಕನ ಹಾಗೆ ಕುಳಿತಿರುತ್ತಿದ್ದೆ. ನಮ್ಮ ಮ್ಯಾತ್ಸ್ ಲೆಕ್ಚರರ್ ಹನುಮೇಶ ವೈದ್ಯ ಅವರು ಆಗಾಗ ಹೇಳುತ್ತಿದ್ದ "Pardon" ಶಬ್ದದ ಉಚ್ಚಾರ ಮತ್ತು ಅರ್ಥ ತಿಳಿದುಕೊಳ್ಳಲು ತಿಂಗಳುಗಳೇ ಆಗಿದ್ದವು. ಈ ಪರಿಸ್ಥಿತಿಯಲ್ಲಿ ನನಗೆ ಮಾತಾಡಲು ಅವಕಾಶ ಇದ್ದ ಕ್ಲಾಸ್ ಅಂದರೆ ಕನ್ನಡ ಕ್ಲಾಸ್. ಆದರೆ ಆ ಕಾಲೇಜಿನವರಿಗೂ ಕನ್ನಡ ಅಂದ್ರೆ ಅಸಡ್ಡೆ ಇರಬೇಕು. ಯಾವುದೋ ಮೀಸಲಾತಿಯಿಂದ ಆಯ್ಕೆಯಾದ ಒಬ್ಬ ಮೇಡಮ್ ಅವರನ್ನು ನೇಮಿಸಿದ್ದರು. ಅವರ ಉಚ್ಚಾರವೇ ಸರಿಯಿರಲಿಲ್ಲ. ಒಂದೆರಡು ಕ್ಲಾಸ್ ಸುಮ್ಮನಿದ್ದೆ. ಒಂದು ದಿನ ಅವರು "ಉಸ್ತವ" ಎಂದು ಉಚ್ಚರಿಸಿದಾಗ, ಎದ್ದು ನಿಂತು "ಮೇಡಮ್ ಅದು ಉಸ್ತವ ಅಲ್ಲ, ಅದನ್ನು ಉತ್ಸವ ಎಂದು ಉಚ್ಚರಿಸಬೇಕು" ಎಂದು ಹೇಳಿದೆ. ಅವರು ಒಪ್ಪಲೇ ಇಲ್ಲ. ನಂತರ ನಾನೇ ಬೋರ್ಡ್ ಮೇಲೆ "ಉಸ್ತವ" ಎಂದು ಬರೆದು "ಇದನ್ನು ಹೇಗೆ ಉಚ್ಚರಿಸುತ್ತೀರಾ?" ಅಂತ ಕೇಳಿದೆ. "ಉಸ್ತವ" ಅಂದರು. "ಹಾಗಾದರೆ ಇವೆರಡಕ್ಕೆ ವ್ಯತ್ಯಾಸ ಇಲ್ಲವಾ?" ಅಂತ ಕೇಳಿದೆ. ಅದಕ್ಕವರು ಉದಾಹರಣೆ ಸಮೇತ ಉತ್ತರ ನೀಡಲು ಆರಂಭಿಸಿದರು, ಬೋರ್ಡ್ ಮೇಲೆ "to" ಮತ್ತು "two" ಎಂದು ಬರೆದು ನನಗೆ ಉಚ್ಚರಿಸಲು ಹೇಳಿದರು. ನನಗೆ ನಿಜಕ್ಕೂ ಶಾಕ್ ಹೊಡೆದ ಹಾಗೆ ಆಯ್ತು, ಏನು ಹೇಳಬೇಕೆಂದು ತಿಳಿಯದೆ, ನನ್ನ ಜಾಗದಲ್ಲಿ ಹೋಗಿ ಕುಳಿತೆ. ಅವರು ನನ್ನ ಕಡೆ ವಿಜಯದ ನಗೆ ಬೀರುತ್ತಾ, ಎಲ್ಲರಿಗೂ ವಿವರಿಸಿ ಹೇಳತೊಡಗಿದರು. "ಇಂಗ್ಲಿಷಲ್ಲಿ ಸ್ಪೆಲ್ಲಿಂಗ್ ಮತ್ತು ಉಚ್ಚಾರ ಹೇಗೆ ಬೇರೆ ಬೇರೆ ಇರುತ್ತದೋ, ಹಾಗೆ ಕನ್ನಡದಲ್ಲಿ ಈ ಶಬ್ದ ಕೂಡ ಅದೇ ರೀತಿ.................".
ನಂತರ ಪರೀಕ್ಷೆಯಲ್ಲಿ "ಉತ್ಸವ(ಉಸ್ತವ ಎಂದು ಓದಬೇಕು)" ಅಂತ ಬರೆದು ಪ್ರತಿಭಟಿಸಿದ್ದೆ. ಅದನ್ನು ಓದಿ ಆ ಮೇಡಮ್ ಸಿಟ್ಟುಗೊಂಡು, ಕಾರಣ ಹೇಳದೇ ನನ್ನನ್ನು ಒಂದು ವಾರ ಕ್ಲಾಸಿನಿಂದ ಹೊರಗೆ ಹಾಕಿದ್ದರು.
Monday, April 09, 2007
ನಮ್ಮೂರ ಕೆರೆ ಬತ್ತುತ್ತಿದೆ......
ಅದ ನೋಡಿ ಎನ್ನ ಕಣ್ಣಾವಲಿಗಳು ತುಂಬುತಿದೆ
ಕೆರೆಗೆ ಬಂದು ಸೇರುತಿದ್ದ ತೊರೆಯು,
ಕೆರೆಯ ಸ್ನೇಹ ತೊರೆದಿದಂತಿದೆ
ತೂಗಿ ನಗುವ ಬೀರುತಿದ್ದ ತಾವರೆಯು
ತನ್ನ ತವರ ಮರೆತಿದಂತಿದೆ.
ಊರ ದಾಹವ ತೀರುತಿದ್ದ ಕೆರೆಯು
ತನ್ನ ದಾಹವಿಂಗಿಸಲು ಆಗಸವ ನೋಡುವಂತಿದೆ.
ತುಂಬಿ ಹರಿಯುತ್ತಿದ್ದ ನೀರು ತಳದ ಕೆಸರಾಗಿದೆ,
ಆ ನೇಸರನ ಉರಿ ತಾಪವ ತಾಳಲಾಗದೆ
ತೊರೆಗೆ ಏಳುತ್ತಿದ್ದ ಬಿಳಿಯ ನೊರೆಯಿಲ್ಲ,
ತಟದಲ್ಲಿ ನೆರೆಯುತ್ತಿದ್ದ ಬೆಳ್ಳಕ್ಕಿಯ ಬಳಗವಿಲ್ಲ
ಅಲ್ಲೀಗ ನೀರಿನ ಚಿಕ್ಕ ಸುಳಿಯಿಲ್ಲ,
ಆಡುತ್ತಿದ್ದ ಚಿಕ್ಕ ಮಕ್ಕಳ ಸುಳಿವಿಲ್ಲ
ತಂಪು ಗಾಳಿಗೆ ಏಳುತಿದ್ದ ತೆರೆಯಿಲ್ಲ,
ಕೆರೆಯ ಈ ಸ್ಥಿತಿ ಮನುಕುಲಕೆ ತರವಲ್ಲ
ಸುಮ್ಮನೆ ಕುಳಿತಿರುವೆಯಾ ಇದ ನೋಡಿ?
ಏಳಲಿ ನಿನ್ನಲಿ ಪರಿಸರ ಜಾಗೃತಿಯ ಕಿಡಿ
ನೀನಲ್ಲವೇ, ಈ ಕೆರೆಯ ನೀರನು ಕುಡಿದು ಬೆಳೆದ ನಮ್ಮೂರ ಕರುಳ ಕುಡಿ?
ಸೇದಿದ ಮೊದಲ ಬೀಡಿ.
ಒಮ್ಮೆ ನಮ್ಮ ಮನೆಯ ಯಾವುದೋ ಸಮಾರಂಭಕ್ಕೆ ಬಂದಿದ್ದ ಭುಜಂಗ ಮಾಸ್ತರರು, ಊಟದ ನಂತರ ಬವಂತಿಯ ಜಗುಲಿ ಮೇಲಿನ ತಳಿಯ ಬಾಗಿಲಿಗೆ ಒರಗಿ ಕುಳಿತು ಬೀಡಿ ಹಚ್ಚಿದರು. ಸಣಕಲು ದೇಹ ವಯಸ್ಸು ಸುಮಾರು 60 ಇರಬೇಕು. ಮನಸ್ಸು ಮಾತ್ರ ಮಗುವಿನಂತದ್ದು, ಕೀರು ದನಿ, ಒಬ್ಬರಿಗೂ ಗಟ್ಟಿ ಮತಾಡಿ ಗೊತ್ತಿಲ್ಲ. ಅವರು ಮಾಸ್ತರರಾಗಿ ನಿವೃತ್ತಿಯಾಗುವವರೆಗೂ ಒಬ್ಬೇ ಒಬ್ಬ ಶಿಷ್ಯನಿಗೂ ಹೊಡೆದಿರಲಿಲ್ಲವಂತೆ. ಅವರು ಹಾಗೆ ಒಂದೊಂದು ದಮ್ಮು ಎಳೆದು ಬಿಡುತ್ತಿದ್ದ ಹೊಗೆ ತಳಿಯ ಕಂಬಗಳನ್ನು ಬಳಸಿ ಹೊರನಡೆಯುತ್ತಿತ್ತು. ಹಾಗೆ ಒಂದು ನಿಮಿಷ ಮುಂಡಗಿ ಕಂಬಕ್ಕೆ ಒರಗಿ ನೋಡುತ್ತಾ ಇದ್ದೆ. ಒಮ್ಮೆ ಗಟ್ಟಿ ಮನಸ್ಸು ಮಾಡಿ ಅವರ ಹತ್ತಿರ ಹೋಗಿ "ಬೀಡಿ ಎಳೆಯುವಾಗ ಉಸಿರನ್ನು ಒಳಗೆ ಎಳೆಯಬೇಕೋ ಹೊರಗೆ ಬಿಡಬೇಕೋ" ಅಂತ ಕೇಳಿಯೇ ಬಿಟ್ಟೆ. ಪಾಪದ ಮಾಸ್ತರರಾದ್ದರಿಂದ ನಂಗೆ ಒಂದು ಮಾತನ್ನೂ ಬೈಯ್ಯದೇ ಪ್ರಾತ್ಯಕ್ಷಿಕೆ ಸಮೇತ ಬೀಡಿ ಸೇದುವ ವಿಧಾನ ವಿವರಿಸಿದರು. ಆದರೇ ನನಗೆ ಅದನ್ನು ಪ್ರಯೋಗ ಮಾಡದ ಹೊರತು ಸಮಾಧಾನ ಇರಲಿಲ್ಲ.
ಅಂಗಳ ಹೆಬ್ಬಾಗಿಲು ದಾಟಿ ನಮ್ಮ ಮನೆ ಹೊಕ್ಕಿದೊಡನೆ ಸಿಗುವುದೇ ಆಯತಾಕಾರದ ದೊಡ್ಡ ಬವಂತಿ. ಅದರ ಮೂರು ಪಾರ್ಶ್ವದಲ್ಲಿ ಒಂದಡಿ ಎತ್ತರದ ಜಗುಲಿ. ಜಗುಲಿಗೆ ಬಳಸಿದಂತೆ ಬೃಹದಾಕಾರದ ಎಂಟು ಮುಂಡಗಿ ಕಂಬಗಳು. ಮಧ್ಯದಲ್ಲಿ ಪ್ರಧಾನ ಬಾಗಿಲು. ಪ್ರಧಾನ ಬಾಗಿಲ ಮೇಲೆ ಒಂದೆರಡು ದೇವರ ಫೋಟೊ. ಬಲಗಡೆ ಅಜ್ಜಯ್ಯನ ಹಳೆಯ ಎರಡು ಆರಾಮ ಕುರ್ಚಿಗಳು ಮತ್ತು ಹೊಸದಾಗಿ ಮಾಡಿಸಿದ ಒಂದು ಸ್ಟೂಲು.
ಮಧ್ಯಾಹ್ನದಿಂದ ಒಂದು ಬೀಡಿ ನನ್ನ ಚಡ್ಡಿ ಕಿಸೆಯಲ್ಲೇ ಇತ್ತು, ಆಗಾಗ ಅದನ್ನ ಮುಟ್ಟಿ ನೋಡಿಕೊಳ್ತಾ ಸರಿಯಾದ ಸಮಯಕ್ಕಾಗಿ ಕಾಯ್ತಾ ಇದ್ದೆ . ಸಂಜೆ ಆಗುವಷ್ಟರಲ್ಲಿ ಬಂದ ನೆಂಟರೆಲ್ಲಾ ಜಾಗ ಖಾಲಿ ಮಾಡಿದ್ದರು. ಆಗಿನ್ನೂ ನಮ್ಮ ಮನೆಗೆ ಕರೆಂಟು ಬಂದಿರಲಿಲ್ಲ. ಬವಂತಿಯ ಮಧ್ಯದಲ್ಲಿ ನೇತುಹಾಕಿದ್ದ ಲಾಟೀನಿನ ಮಬ್ಬು ಬೆಳಕು, ಬವಂತಿಯನ್ನು ಅಸ್ಪಷ್ಟವಾಗಿ ತೋರಿಸುತ್ತಿತ್ತು. ಮನೆಯವರೆಲ್ಲಾ ಒಳಗೆ ಹಿತ್ತಲಕಡೆಯಲ್ಲಿ ಇದ್ದರು. ಬವಂತಿ ನಿರ್ಜನವಾಗಿತ್ತು. ನಾನು ಎರಡು ಆರಾಮ ಕುರ್ಚಿಗಳ ನಡುವೆ ಜಾಗ ಮಾಡಿಕೊಂಡು ಚಡ್ಡಿಯಲ್ಲಿದ್ದ ಬೀಡಿ ತೆಗೆದು ಹೊತ್ತಿಸಿದೆ, ಭುಜಂಗ ಮಾಸ್ತರರ ನೆನೆಯುತ್ತಾ ಒಂದು ದಮ್ಮು ಎಳೆಯುವಷ್ಟರಲ್ಲಿ ಪ್ರಧಾನ ಬಾಗಿಲಿಂದ ಯಶೋದತ್ತೆ ಹೊರಗೆ ಬಂದಳು. ಆ ಮಬ್ಬು ಬೆಳಕಿನಲ್ಲಿ ಬೀಡಿಯ ಬೆಂಕಿ ಸ್ಪಷ್ಟವಾಗಿ ಕಾಣುತ್ತಿತ್ತು. "ಯಾರದು?" ಎಂದಳು. ನಾನು ಬೀಡಿಯನ್ನು ನೆಲಕ್ಕೆ ಎಸೆದೆ. ಹತ್ತಿರ ಬಂದು "ಗುರು ಬೀಡಿ ಸೇದುತ್ತಾ ಇದ್ಯಾ?" ಅಂತ ಕೇಳಿದಳು. ನಾನು ಉತ್ತರಿಸಬೇಕಾದ ಅಗತ್ಯ ಇರಲಿಲ್ಲ. ನಾನು ಬೀಡಿಗೆ ಬೆಂಕಿ ಹಚ್ಚಿದ್ದು, ಮನೆಮಂದಿಗೆಲ್ಲಾ ಕಾಡ್ಗಿಚ್ಚಿನಂತೆ ಹಬ್ಬಿ ನಂತರ ಅದೇ ಮಾಮೂಲು ನುಕ್ಕಿ ಬಡ್ರು, ಪರಂಗಿಮಣೆ. ಇದು ಬೀಡಿಗಿಂತ ಏನೂ ವಿಶೇಷ ಅಲ್ಲ ಬಿಡಿ.
Friday, April 06, 2007
ನಾನೊಂದು ನಾನ್ ತಿಂದೆ.
ಸಪ್ಲೈಯರ್ ಬಂದು "ಏನು ಬೇಕು ಸರ್?" ಅಂದ. "ಏನಿದೆ?" ಅಂತ ಕೇಳಿದ್ದಕ್ಕೆ "ನಾನ್ ಇದೆ" ಅಂದ. ಪಕ್ಕದಲ್ಲಿದ್ದ ಜಗ್ಗಣ್ಣ "ನನಗೊಂದು ನಾನ್" ಅಂದ. ನನಗೆ ಅವರಿಬ್ಬರ ಸಂಭಾಷಣೆ ಅರ್ಥ ಆಗಲಿಲ್ಲ. ಸ್ವಲ್ಪ ಸಮಯದ ನಂತರ ತಿಳಿಯಿತು ಅದೊಂದು ರೊಟ್ಟಿ ತರಹದ ತಿಂಡಿ ಎಂದು. ದರ್ಶಿನಿ, ಸಾಗರಗಳಲ್ಲಿ ಇಡ್ಲಿ ಸಾಂಬಾರ್ ತಿನ್ನುವವನಿಗೆ ಇದೆಲ್ಲಿಂದ ಗೊತ್ತಿರಬೇಕು?
ಅದಕ್ಕೆ ಆ ಹೆಸರು ಇಟ್ಟ ಪುಣ್ಯಾತ್ಮನ ವಿಚಾರ ಏನಿತ್ತೋ ಏನೋ? "ನಾನು" ಎನ್ನುವುದು ಅಹಂಕಾರದ ಪ್ರತೀಕ, ಅದನ್ನ ತಿಂದು ಅಹಂಕಾರವನ್ನು ಕಡಿಮೆ ಮಾಡಿಕೊಳ್ಳುವುದೆಂದೋ ಅಥವಾ ತಿಂದು ಹೆಚ್ಚುಮಾಡಿಕೊಳ್ಳುವುದೆಂದೋ? ತಿಳಿದವರು ಹೇಳಿದರೆ ಒಳಿತು.
ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಹೋದಾಗ ಅಮ್ಮ "ಊಟ ಆಯಿತಾ ಮಗಾ?" ಅಂತ ಕೇಳಿದಳು. "ಊಟ ಮಾಡಿಲ್ಲೆ, ನಾನೊಂದು ನಾನು ತಿಂದೆ" ಅಂದೆ. ಅಮ್ಮನಿಗೆ ಅರ್ಥವಾಗದೆ "ಏನಾದರೂ ತಿನ್ನು ಈಗ ನನ್ನ ತಲೆ ತಿನ್ನಬೇಡ ಬಿದ್ಕ ಸುಮ್ನೆ" ಅಂದಳು.
Wednesday, April 04, 2007
ಕಾಪಿ ತರಿಸುತ್ತಿದ್ದ ಕೋಪ
ನಾನು ಅಜ್ಜಿಮನೆಯಲ್ಲಿ ಇದ್ದು ಶಾಲೆಗೆ ಹೋಗುತ್ತಿದ್ದೆ. ನನ್ನ ಚಿಕ್ಕಮ್ಮನೇ ನಂಗೆ ಟೀಚರ್. ಅದು ಏಕೋಪಾಧ್ಯಾಯ ಶಾಲೆ. ಒಂದೇ ಕೋಣೆ ನಾಲ್ಕು ಕ್ಲಾಸು. ಅವಳಿಗೆ ಎಲ್ಲರೂ ಬರೆದ ಕಾಪಿಯನ್ನು ನೋಡುವುದು ಕಷ್ಟವಾದ್ದರಿಂದ ನಮ್ಮ ಕ್ಲಾಸಿನ ಕಾಪಿ ಚೆಕ್ ಮಾಡುವ ಕೆಲಸ ನಂಗೆ ಕೊಟ್ಟಿದ್ದಳು. "ಕಳ್ಳನ ಕೈಯಲ್ಲಿ ಬೀಗ". ನಮ್ಮ ಕ್ಲಾಸಿನ ಎಲ್ಲರ ಕಾಪಿಯನ್ನು ಸ್ಟ್ರಿಕ್ಟ್ ಆಗಿ ಚೆಕ್ ಮಾಡ್ತಿದ್ದೆ ಆದರೆ ನಾನು ಮಾತ್ರ ಪ್ರಾಮಾಣಿಕವಾಗಿ ಕಾಪಿ ಬರೆಯುವುದನ್ನೇ ನಿಲ್ಲಿಸಿದೆ. ಸುಮಾರು ನಾಲ್ಕು ತಿಂಗಳು ಆರಾಮ ಆಗಿ ಕಾಪಿ ಬರೆಯದೆ ಕಳೆದೆ. ಒಂದು ದಿನ ಎಡ ಮಗ್ಗುಲಲ್ಲಿ ಎದ್ದಿದ್ದನೋ ಏನೋ? ಸಿಕ್ಕಿಬಿದ್ದೆ. ಮೊದಲನೆಯದಾಗಿ ದಾಸವಾಳ ಬಡ್ರು(ಕೋಲು) ಹುಡಿ ಆಯ್ತು, ಸಿದ್ದನ ಮನೆ ಕೃಷ್ಣನಿಂದ ನುಕ್ಕಿ ಬಡ್ರು ತರಿಸಿ ಅದರಿಂದ ಸೇವೆ ಆಯ್ತು, ಎಲ್ಲಾ ತರಹದ ಪೂಜೆ ಆದಮೇಲೆ ಅನುಭವಿಸಿದ್ದೇ ಪರಂಗಿಮಣೆ. ಪರಂಗಿಮಣೆ ಅಂದ್ರೆ ಒಂದು ತರಹದ ಶಿಕ್ಷೆ. ನಿಲ್ಲುವ ಮತ್ತು ಕುಳಿತುಕೊಳ್ಳುವುದರ ನಡುವಿನ ತ್ರಿಶಂಕು ಸ್ಥಿತಿ. ಯೋಗಾಸನದ ಭಾಷೆಯಲ್ಲಿ ಹೇಳುವುದಾದರೆ "ಪಾದದಿಂದ ಮೊಣಕಾಲು ಗಂಟಿನವರೆಗಿನ ಭಾಗ ಭೂಮಿಗೆ ಲಂಬವಾಗಿದ್ದು, ಮೊಣಕಾಲು ಗಂಟಿನಿಂದ ಸೊಂಟದವರೆಗಿನ ಭಾಗ ಭೂಮಿಗೆ ಸಮಾನಾಂತರವಾಗಿರಬೇಕು ಮತ್ತು ಸೊಂಟದಿಂದ ಮೇಲಿನ ಭಾಗ ಭೂಮಿಗೆ ಲಂಬವಾಗಿರಬೇಕು. " ಈ ಸ್ಥಿತಿಯಲ್ಲಿ ನಿಲ್ಲಿಸಿ ತೊಡೆಯ ಮೇಲೆ ಒಂದು ಪುಸ್ತಕ ಇಟ್ಟು, ಅದು ನೆಲಕ್ಕೆ ಬಿದ್ದರೆ ಮತ್ತೆ ಪೆಟ್ಟು. ಈ ಪರಂಗಿಮಣೆ ಶಿಕ್ಷೆಯನ್ನು ಎರಡು ತಾಸು ಅನುಭವಿಸಿ ಮನೆಗೆ ಹೋದರೆ ಅಲ್ಲಿ ಮತ್ತೆ ಅದೇ ಚಿಕ್ಕಮ್ಮ. ಬೆಳಿಗ್ಗೆ ಒಳಗೆ ನಾನು ಬಾಕಿ ಉಳಿಸಿದ ಸುಮಾರು 120 ಪುಟಗಳನ್ನು ಬರೆದು ಮುಗಿಸಬೇಕೆಂಬ ಆಜ್ಞೆ ಬೇರೆ. ಆಗ ನನ್ನ ಸಹಾಯಕ್ಕೆ ಬಂದಿದ್ದು ಅಜ್ಜಯ್ಯ. ಅಜ್ಜಯ್ಯನಿಗೆ ನನ್ನ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ, ನಾನೇ ಅವನಿಗೆ ಮೊದಲ ಮೊಮ್ಮಗ. ಎಲ್ಲೋ ಹೊರಗೆ ಹೋಗಿದ್ದ ಅಜ್ಜಯ್ಯ ಬಂದ. ನನ್ನ ಅಳು ಸ್ವಲ್ಪ ಜಾಸ್ತಿ ಮಾಡಿದೆ. ಏನು ಎತ್ತ ಅಂತ ಎಲ್ಲಾ ವಿಚಾರಿಸಿ, ಚಿಕ್ಕಮ್ಮನ ತರಾಟೆ ತಗೊಂಡ ನಂಗೆ ಒಳಗೊಳಗೆ ಖುಷಿ. ಅವನದ್ದು ಒಂದೇ ಪ್ರಶ್ನೆ ಪುಸ್ತಕದಲ್ಲಿದ್ದುದನ್ನ ನಾನು ಯಾಕೆ ಮತ್ತೆ ಬರೀಬೇಕು ಅಂತ. ಹಾಗೂ ಹೀಗೂ ಸಂಧಾನ ಮಾಡಿ ಬಾಕಿಯನ್ನು ಒಂದು ವಾರದ ಒಳಗೆ ಬರೆಯಬೇಕೆಂದು ನಿರ್ಧಾರ ಆಯ್ತು.
ನಾಲ್ಕನೇ ಕ್ಲಾಸ್ ಮುಗಿಸಿ ಐದನೇ ಕ್ಲಾಸಿಗೆ ಬಂದರೆ ಇನ್ನು ಎರಡು ಕಾಪಿ(ಇಂಗ್ಲಿಷ್, ಹಿಂದಿ) ಹೆಚ್ಚು ಆಗಿತ್ತು. ಬೇಸಿಗೆ ಮತ್ತು ದಸರಾ ರಜೆಯಲ್ಲೂ ಕಾಪಿ ಬರೆಯಲು ಹೇಳುತ್ತಿದ್ದರು. ರಜೆಯ ಮೊದಲ ಎರಡು ದಿನ ಕುಳಿತು ಎಲ್ಲ ದಿನದ ಕಾಪಿ ಬರೆದು ಮುಗಿಸುತ್ತಿದ್ದೆ, ಇಲ್ಲಾ ಯಾರಿಗಾದರೂ outsource ಮಾಡುತ್ತಿದ್ದೆ. ಇದರ ಜೊತೆ ಮೊದಲಿನಿಂದ ಬರೆಯುತ್ತಿದ್ದ ಒಳ್ಳೆಯ ಕೆಲಸ. ದಿನಾಲು ಒಂದೊಂದು ಒಳ್ಳೆಯ ಕೆಲಸ ಬರೆಯಬೇಕಿತ್ತು. ನಾನು ಒಳ್ಳೆಯ ಕೆಲಸವನ್ನು ಹುಡುಕಿ ಬರೆಯುತ್ತಿದ್ದನೇ ಹೊರತು ಒಳ್ಳೆಯ ಕೆಲಸ ಮಾಡಿ ಬರೆಯುತ್ತಿದ್ದುದು ಕಡಿಮೆ. ಒಂದು ದಿನ "ಇಂದು ನಾನು ಯವುದೇ ಒಳ್ಳೆಯ ಕೆಲಸ ಮಾಡಲಿಲ್ಲ" ಎಂದು ಬರೆದುಕೊಂಡು ಹೋಗಿ ಬೈಸಿಕೊಂಡಮೇಲೆ ಇದರ ಒಳಗುಟ್ಟು ತಿಳಿದುಹೋಯ್ತು. ದಿನಾಲು ಹೊಸ ಹೊಸ ಒಳ್ಳೆಯ ಕೆಲಸ ಹುಡುಕಿ ಬರೆದುಕೊಂಡು ಹೋಗುವುದೇ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಯಾವುದು ಸಿಗದಿದ್ದರೆ ಹಿಂದಿನ ಪುಟಗಳನ್ನು ತಿರುವಿ, ಅದರಲ್ಲೇ ಒಂದನ್ನು ಆರಿಸಿ ಬರೆಯುತ್ತಿದ್ದೆ. ನನ್ನ ತಂಗಿಯಂತೂ ಯಾವಗಲೋ ಒಮ್ಮೆ ನಮ್ಮ ಅಜ್ಜಿಗೆ ಮರಿಗೆಯಿಂದ ಉಪ್ಪು ತಂದು ಕೊಟ್ಟಿದ್ದನ್ನು "ನಾನು ಇಂದು ಅಜ್ಜಿಗೆ ಉಪ್ಪು ತಂದು ಕೊಟ್ಟೆನು" ಎಂದು ಆಗಾಗ ಬರೆಯುತ್ತಿದ್ದಳು. ಒಂದು ದಿನ ಸುಬ್ಬಕ್ಕೋರು ನಿಮ್ಮ ಅಜ್ಜಿ ಇಷ್ಟೊಂದು ಉಪ್ಪನ್ನು ಏನು ಮಾಡ್ತಾರೆ ಅಂತ ಕೇಳಿದ್ದರು. ಅದಕ್ಕೆ ತಂಗಿ ನಾವು ದಿನಾಲು ಶಾಲೆಯಿಂದ ಮನೆಗೆ ಹೋದ ಮೇಲೆ ದೃಷ್ಟಿ ತೆಗಿತಾರೆ ಅಂತ ತಿರುಗಿ ಹೇಳಿದಾಗ ಸುಬ್ಬಕ್ಕೋರಿಗೆ ಏನು ಹೇಳಬೇಕೆಂದು ತಿಳಿದೇ ಸುಮ್ಮನಾಗಿದ್ದರು.
ಹೈಸ್ಕೂಲಿಗೆ ಹೋದಮೇಲೆ ತಿಗಡಿ ಮಾಸ್ತರರ ಹಿಂದಿ ಕಾಪಿ ಬರೆಯುವುದೇ ದೊಡ್ದ ತಲೆನೋವು ಆಗಿ ಹೋಗಿತ್ತು. ಮೊದಲೇ ಕಾಪಿ ಬರೆಯುವುದೆಂದರೆ ನಾನು ಹಿಂದೆ. ಆದರಲ್ಲೂ ಅದು ಹಿಂದಿ ಅಕ್ಷರ ಎಲ್ಲೆಲ್ಲೋ ಸುತ್ತಿ ಬಳಸಿ, ಮೇಲೆ ಒಂದು ಅಡ್ದ ಗೆರೆ ಹಾಕುವಷ್ಟರಲ್ಲಿ ಕೈಬೆರಳುಗಳ ಮೂಳೆಯೆಲ್ಲಾ ಮುರಿದ ಅನುಭವ. ಅದು ಒಂದು ಗೆರೆ ಪಟ್ಟಿಯಲ್ಲಿ ಬರೀಬೇಕು. 18 ರಿಂದ 20 ಸಾಲುಗಳು. ಇವರು ಸಹ ಪ್ರತಿದಿನ ನೋಡುತ್ತಿರಲಿಲ್ಲ, ನೋಡಿದ ದಿನ ಮಾತ್ರ ಆವತ್ತಿನ ದಿನಾಂಕ ಹಾಕಿ ತೋರಿಸುತ್ತಿದ್ದೆ. ಕಾಲೇಜಿಗೆ ಹೋದ ನಂತರ ನೋಟ್ಸ್ ಬರೆಯಲು ಉದಾಸೀನವಾಗಿ ಪಕ್ಕದವ ನೋಟ್ಸ್ ಬರೆಯುವಾಗ ಕಾರ್ಬನ್ ಇಟ್ಟು ಅಡಿಯಲ್ಲಿ ನನ್ನ ಪೇಪರ್ ಇಡುತ್ತಿದ್ದೆ.
ಕಾಪಿ ಬರೆಸುವ ಉದ್ದೇಶ ಸುಂದರವಾಗಿ ಬರೆಯಲು ಕಲಿಸುವುದು ಮಾತ್ರ ಆಗಿದ್ದರೆ ಈಗಂತೂ ಕಂಪ್ಯೂಟರ್ ಇರುವುದರಿಂದ ಅದರ ಅಗತ್ಯ ಇರಲಿಲ್ಲ. ಇದು ನಮ್ಮ ಭಾಷಾ ಜ್ಞಾನವನ್ನೂ ಹೆಚ್ಚಿಸುತ್ತದೆ. ಏನು ಮಾಡುವುದು ಕೆಟ್ಟ ಮೇಲೆ ........ ..........
Friday, December 29, 2006
ಅಂತರ
ನಾವಿಬ್ಬರೂ ಅಕ್ಕಪಕ್ಕದ ಹಾಳೆಯ ಪುಟಗಳು.
ನಮ್ಮಿಬ್ಬರ ನಡುವೆ ಎಷ್ಟೇ ಪುಟಗಳು ಬಂದರೂ,
ಮೊದಲ ಪುಟಕೂ, ಕೊನೆಯ ಪುಟಕೂ ಇರುವ ಅಂತರ ಎಂದೂ ಬರದಿರಲಿ.
ಪರಿಶುದ್ಧ ಸ್ನೇಹಕ್ಕೆ ಒಂದು ಪತ್ರ

.....ಊ,
ನನ್ನ ಬಾಳ ಪುಸ್ತಕದಲ್ಲಿ ನಿನ್ನ ಅಥವಾ ನಿನ್ನಂತವರ ಆಗಮನವಾಗುತ್ತದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.
ನೀನು ಸಿಕ್ಕಾಗ ನಿನ್ನ ಬಗ್ಗೆ ಯವುದೋ ಪುಟದ ಒಂದು ಮೂಲೆಯಲ್ಲಿ ನಿನ್ನ ಬಗ್ಗೆ ಒಂದು ಸಾಲು ಬರೆದೆ. ಆಮೇಲೆ ಅದನ್ನು ದಪ್ಪ ಅಕ್ಷರದಲ್ಲಿ ಬರೆದೆ. ಆಮೇಲೆ ನಿನಗಾಗಿ ಒಂದು ಪುಟವನ್ನು ಮೀಸಲಿರಿಸಿದೆ. ಆ ಪುಟದಲ್ಲಿ ಒಂದೊಂದು ಅಕ್ಷರವನ್ನೂ ಜಾಗರೂಕತೆಯಿಂದ, ಬಹಳ ಸುಂದರವಾಗಿ ಬರೆಯಲಾರಂಭಿಸಿದೆ. ಅದರಲ್ಲಿ ಆಗುವ ಚಿತ್ತು ಕಾಟುಗಳು, ನನ್ನ ಬಾಳ ತುಂಬ ನನ್ನನ್ನು ಅಪಹಾಸ್ಯ ಮಾಡಿ ನಗಬಾರದಲ್ಲ?
ನಿನಗೋಸ್ಕರ ಮೀಸಲಿರಿಸಿದ ಒಂದು ಪುಟ ಸಾಕಾಗಲೇ ಇಲ್ಲ, ಇನ್ನೊಂದರಲ್ಲಿ ಬರೆದೆ. ನಂತರ ಮತ್ತೊಂದು ಮಗದೊಂದು, ಈಗ ನೀನು ಆ ಪುಸ್ತಕದ ಅವಿಭಾಜ್ಯ ಅಂಗ. ಒಮ್ಮೆ ಯಾವುದೋ ಕ್ಷಣದಲ್ಲಿ ಆ ಪುಟಗಳನ್ನು ಕೀಳಬೇಕೆಂದು ಪ್ರಯತ್ನಿಸಿದೆ. ಆದರೆ ಕೀಳಲು ಮಾತ್ರ ಆಗಲಿಲ್ಲ. ಬದಲಾಗಿ ಇನ್ನೂ ಬರೆದೆ, ಈಗಲೂ ಬರೆಯತ್ತುಲೇ ಇದ್ದೇನೆ, ದಿನಾಲೂ, ಪ್ರತಿ ಕ್ಷಣ..
Thursday, October 26, 2006
ಕವನಗಳ ಕಂತೆ
ಎಲ್ಲರಿಗೂ ನಮಸ್ಕಾರ.
ನನ್ನ ಪ್ರಕಾರ, ಎಲ್ಲರ ಮನಸ್ಸಿನಲ್ಲೂ ಒಬ್ಬ ಕವಿ ಇದ್ದೇ ಇದ್ದಾನೆ. ಅವ ಎಲ್ಲಾ ಸಮಯದಲ್ಲಿ ಹೊರಗೆ ಬರದೆ ಇರಬಹುದು. ನೀವು ಬರೆದ ಕವನ ಇರಬಹುದು,ಚುಟುಕು ಇರಬಹುದು, ಅದನ್ನ ಇಲ್ಲಿ ಬರೆಯಿರಿ. ನಾಲ್ಕು ಜನಕ್ಕೆ ನಿಮ್ಮ ಪ್ರತಿಭೆ ಗೊತ್ತಾಗ್ಲಿ ಏನಂತಿರಾ? ದಯವಿಟ್ಟು ಅಶ್ಲೀಲ ಕವನಗಳಿಂದ ಇದನ್ನ ದೂರ ಇಡಿ.
ನನ್ನ ಒಂದೆರಡು ಚುಟುಕದಿಂದ ಶುರು ಮಾಡುತ್ತೇನೆ.
ಓ ನನ್ನ ನಲ್ಲೆ
ನಿನ್ನ ನಗುವಲ್ಲೇ ನಾ ಮನಸೋತೆನಲ್ಲೆ
ಮನಸೋತು ಎಚ್ಚರ ತಪ್ಪಿ ಬಿದ್ದೆನಲ್ಲೆ
ಈಗ ತಾನೆ ಎಚ್ಚರಗೊಳ್ಳುವುದರಲ್ಲಿದ್ದೆನಲ್ಲೆ
ಆದರೆ ನೀ ಮತ್ತೆ ನಕ್ಕುಬಿಟ್ಟೆಯಲ್ಲೆ, ಓ ನನ್ನ ನಲ್ಲೆ?
ಚಲನಚಿತ್ರ
ಇತ್ತೀಚೆಗೆ ನಾ ನೋಡಿದೆ ಒಂದು ಚಲನಚಿತ್ರ
ಅದರಲ್ಲಿ ಎಲ್ಲಾ ಚಿತ್ರ ವಿಚಿತ್ರ
ಎಲ್ಲರ ಕೈಯಲ್ಲೂ ಮಚ್ಚು,ಲಾಂಗು
ಹೆದರಿ ನಾ ಓಡಿದೆ ಒಂದು ಫರ್ಲಾ೦ಗು
ನಗು
ನಿನ್ನ ನಗುವ ಸೆರೆ ಹಿಡಿದಿದ್ದೆ ನನ್ನ Computerನಲ್ಲಿ
ಅದು Delete ಆಗಿತ್ತು Formatiನಲ್ಲಿ
ನೀ ಚಿಂತಿಸದಿರು ಓ ನನ್ನ ನಲ್ಲೆ
ಅದು ಎಂದೋ store ಆಗಿತ್ತು ನನ್ನ ಹೃದಯದಲ್ಲೇ
ನನ್ನತನ
ನಿನ್ನ ಮರೆಯಲೆಂದು ಸಿಗರೇಟು ಸೇದುವುದ ಕಲಿತೆ, ವಿಸ್ಕಿ ಕುಡಿಯುವುದ ಕಲಿತೆ
ಒಟ್ಟಾರೆ ನಿನ್ನ ಮರೆಯಲು ಹೋಗಿ ನನ್ನತನವ ನಾ ಮರೆತೆ